ಪ್ರಧಾನಮಂತ್ರಿ ಕೈಗಾರಿಕೆ ಪ್ರಶಸ್ತಿ’ ಜಿಂದಾಲ್ ಮಡಿಲಿಗೆ
ಬಳ್ಳಾರಿ: ಸಮಗ್ರ ಉಕ್ಕು ಸ್ಥಾವರ ವೈಶಿಷ್ಟ್ಯಪೂರ್ಣ ನಿರ್ವಹಣೆಗಾಗಿ ಸಂಡೂರು ತಾಲೂಕಿನ ತೋರಣಗಲ್ನ ಜೆಎಸ್ಡಬ್ಲ್ಯು ಸ್ಟೀಲ್ ಸಂಸ್ಥೆ ದೇಶದ ಅತ್ಯುನ್ನತ 'ಪ್ರಧಾನಮಂತ್ರಿ ಕೈಗಾರಿಕೆ ಪ್ರಶಸ್ತಿ'ಗೆ ಭಾಜನವಾಗಿದೆ.
ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೆಎಸ್ಡಬ್ಲು ಅಧ್ಯಕ್ಷ ಸಜ್ಜನ್ ಜಿಂದಾಲ್ ಹಾಗೂ ಡಿಎಂಡಿ ವಿನೋದ್ ನಾವಲ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಪ್ರಶಸ್ತಿಯು ಪರಿಣಿತ ತೀರ್ಪಗಾರರ 13 ಮಾನದಂಡಗಳ ಆಧಾರದಲ್ಲಿ ದೇಶದ ಉಕ್ಕು ಸ್ಥಾವರಗಳ ಅಮೂಲಾಗ್ರ ಮೌಲ್ಯಮಾಪನ ಮಾಡಿ, ಜೆಎಸ್ಡಬ್ಲ್ಯುನ ಜಯನಗರ ಸ್ಟೀಲ್ ವರ್ಕ್ಸ್ ದೇಶದ ಅತ್ಯುತ್ತಮ ಉಕ್ಕು ಸ್ಥಾವರ ಎಂದು ಘೊಷಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಸಜ್ಜನ್ ಜಿಂದಾಲ್, ಸಂಸ್ಥೆಗೆ ಸಲ್ಲುತ್ತಿರುವ ಪ್ರಶಸ್ತಿಗಳು ಹಾಗೂ ಗೌರವಗಳು ನಾವು ನಂಬಿ ಅನುಸರಿಸುತ್ತಿರುವ ಮೌಲ್ಯ ಪಾಲನೆಯ ರುಜುವಾತುಗಳು. ನಮ್ಮ ಕನಸಿನ ಸ್ವಾವಲಂಬಿ ಹಾಗೂ ಬಲಿಷ್ಠ ಭಾರತ ಕಟ್ಟುವ ಮುನ್ಸೂಚನೆಗಳು ಎಂದೇ ಭಾವಿಸಿದ್ದೇವೆ. ಭಾರತ ಸೂಪರ್ ಪವರ್ ರಾಷ್ಟ್ರವಾಗುವ ನಿಟ್ಟಿನೆಡೆಗೆ ಹೆಜ್ಜೆ ಇಡುತ್ತಿದ್ದು, ಸಂಸ್ಥೆಗೆ ಸಂದಿರುವ ಪ್ರಶಸ್ತಿಯಿಂದ ಮತ್ತಷ್ಟೂ ಜವಾಬ್ದಾರಿ ಹೆಚ್ಚಿಸಿದೆ ಎಂದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಸ್ಥೆಯ ಡಿಎಂಡಿ ವಿನೋದ್ ನಾವಲ್, ಪ್ರಧಾನಮಂತ್ರಿ ಪಾರಿತೋಷಕ ಗೆದ್ದ ಈ ಘಳಿಗೆ ನಮ್ಮ ಬದ್ಧತೆಯನ್ನು ಬಲಪಡಿಸಲು ಪ್ರೋತ್ಸಾಹದಾಯಕವಾಗಿದೆ. ಪ್ರಶಸ್ತಿಯು ನಿರ್ವಹಣಾ ವೈಶಿಷ್ಟ್ಯಲ್ಲಿ ಹೊಸ ಬಗೆಯ ಗುರಿಗಳನ್ನು ಹೊಂದಲು ಆತ್ಮವಿಶ್ವಾಸ ಮೂಡಿಸಿದೆ ಎಂದರು.
ಜೆಎಸ್ಡಬ್ಲ್ಯುನ ಸಮಗ್ರ ನಿರ್ವಹಣೆಯು 1994ರಲ್ಲಿ ಆರಂಭಗೊಂಡಿದ್ದು, ಈವರೆಗೆ ಸ್ಥಾವರವು ತ್ವರಿತಗತಿಯಲ್ಲಿ ಬೆಳೆಯುತ್ತಿದೆ. ತೋರಣಗಲ್ ಬಳಿಯಲ್ಲಿರುವ ಜೆಎಸ್ಡಬ್ಲ್ಯು ಸ್ಟೀಲ್ ಸ್ಥಾವರವು ಭಾರತದ ಪ್ರಥಮ ಕೊರೆಕ್ಸ್ ತಾಂತ್ರಿಕತೆ ಉಪಯೋಗಿಸಿ ಕಬ್ಬಿಣ ಉತ್ಪಾದಿಸುವ ಗ್ರೀನ್ಫೀಲ್ಡ್ ಯೋಜನೆಯಾಗಿದೆ. ಆಟೋಮೊಬೈಲ್ ಉತ್ಪಾದನೆಗಳಿಗಾಗಿ ಆಮದು ಮಾಡಿಕೊಳ್ಳಲಾಗುತ್ತಿದ್ದ ಕಬ್ಬಿಣದ ಪ್ರಮಾಣ ಇಳಿಕೆಯಾಗಿದೆ. ಇದರಿಂದ ವಿದೇಶ ಅವಲಂಬನೆ ತಪ್ಪಿದ್ದು, ಸ್ವಾವಲಂಬನೆ ಸಾಧ್ಯವಾಗಿದೆ ಎಂದು ಹೇಳಿದರು.
***
ಜಿವಿಟಿ 03 ಜಿಂದಲ್
ಒಡಿಶಾ ರಾಜ್ಯದ ರೂರ್ಕೆಲಾದಲ್ಲಿ ಈಚೆಗೆ ಜರುಗಿದ ಸಮಾರಂಭದಲ್ಲಿ ಪ್ರಧಾನಮಂತ್ರಿ ಕೈಗಾರಿಕೆ ಪ್ರಶಸ್ತಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಜೆಎಸ್ಡಬ್ಲ್ಯು ಅಧ್ಯಕ್ಷ ಸಜ್ಜನ್ ಜಿಂದಲ್ ಹಾಗೂ ಡಿಎಂಡಿ ವಿನೋದ್ ನಾವಲ್ ಅವರಿಗೆ ಪ್ರದಾನ ಮಾಡಿದರು.
Comments
Post a Comment